ಓಂಕಾರ್ ಮೂವೀಸ್ ಅಡಿಯಲ್ಲಿ ಈ ವಾರ ಬಿಡುಗಡೆ ಆಗುತ್ತಿರುವ ‘ಮೈತ್ರಿ’ ಹಲವಾರು ವಿಶೇಷಗಳನ್ನು ಹೊಂದಿದೆ. ಇದು ಮಧುರ ‘ಮೈತ್ರಿ’ಯೂ ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಅಪೂರ್ವ ಸಂಗಮ ಈ ‘ಮೈತ್ರಿ’ ಮೂಲಕ ಸಾಧ್ಯವಾಗಿದೆ. ಈ ಚಿತ್ರದ ನಿರ್ಮಾಪಕರು ಎನ್.ಎಸ್ ರಾಜಕುಮಾರ್, ಪ್ರತಿಭಾವಂತ ನಿರ್ದೇಶಕ ಬಿ.ಎಂ ಗಿರಿರಾಜ್ ಅವರ ವಿನೂತನ ಕಥೆ ಇಲ್ಲಿದೆ. ಈ ಚಿತ್ರಕ್ಕೆ ನಾದಬ್ರಹ್ಮ, ಸಂಗೀತ ಮಾಂತ್ರಿಕ ಇಳಯರಾಜ ಅವರ ಸುಮಧುರ ಸಂಗೀತ ಮತ್ತಷ್ಟು ಆಕರ್ಷಣೆ ತಂದುಕೊಟ್ಟಿದೆ.
‘ಮೈತ್ರಿ’ ಸಿನಿಮಾದಲ್ಲಿ ಮೋಹಲ್ ಲಾಲ್ ಅವರದು ರಕ್ಷಣಾ ಇಲಾಖೆಯ ವಿಜ್ಞಾನಿ ಪಾತ್ರ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಲ್ಲಿ ‘ನವಿಲಾದವರು, ಅದ್ವೈತ, ಜಟ್ಟ ಸಿನಿಮಾಗಳ ನಿರ್ದೇಶಕರಾದ ಗಿರಿರಾಜ್ ನಿರ್ಮಾಪಕ ಎನ್.ಎಸ್ ರಾಜಕುಮಾರ್ ಅವರೊಂದಿಗೆ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಎ. ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಮದನ್ ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಮೋಹನ್ ಲಾಲ್, ಪುನೀತ್ ರಾಜಕುಮಾರ್ ಅವರ ಜೊತೆಗೆ ಅರ್ಚನ (ಆ ದಿನಗಳು) ಭಾವನ ಮೆನನ್ ಅಲ್ಲದೆ ಅನೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಬಾಲ ನಟರಾಗಿ ಆದಿತ್ಯ, ಸಮರ್ಥ, ಕುಶಾಲ್, ದೇವು ಹಾಗೂ ಇನ್ನಿತರರು ಅಭಿನಯಿಸಿದ್ದಾರೆ.